Tuesday, September 15, 2009

ಹೀಗೊಂದು ಮಾತು...

ಇವತ್ತು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನ ಅನ್ನೋದು ಎಷ್ಟು ಮಂದಿಗೆ ಗೊತ್ತಿದೆಯೋ ಗೊತ್ತಿಲ್ಲ. ಇವತ್ತು ಬೆಳಗ್ಗೆ ನನಗೆ ನೆನಪಾದಾಗ ಏನಾದ್ರೂ ಬರೀಬೇಕು ಅಂತ ಅನ್ನಿಸಿತಾದರೂ ಏನು ಬರೀಬೇಕು ಅಂತ ಮಾತ್ರ ತಕ್ಷಣ ತೋಚಲಿಲ್ಲ. ನಾನು ಅವರ ಬಗೆಗಿನ ಪುಸ್ತಕಗಳನ್ನು ಒಂದಷ್ಟು ಓದಿದ್ದೀನಾದರೂ ಅವರೇ ಬರೆದ ಪುಸ್ತಕಗಳನ್ನು ಅಷ್ಟಾಗಿ ಓದಿಲ್ಲ. ಕೆಲಸದ ಮಧ್ಯೆ ಆಗಾಗ ಯೋಚನೆ ಮಾಡ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ವಿಷಯ ನೆನಪಾಯ್ತು. ಅದು ಇತ್ತೀಚೆಗೆ ಬಹುಮುಖ 'ಮೇಧಾವಿಗಳ' ಮೇಳವಾಗಿರುವ ನಮ್ಮ (ಭಾರತದ) ಕೇಂದ್ರ ಸರಕಾರದಲ್ಲಿರುವ ಒಬ್ಬ ಮಹಾನ್ ಮಂತ್ರಿಯೊಬ್ಬರ ಪ್ರಚಂಡ ತಲೆಯಿಂದ ಉತ್ತೇಜಿತವಾದ ನೆನಪು.

ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾದ ಮೇಲೆ ಮಾಡಿದ ಮೊದಲನೆ ಮುಖ್ಯ ಕೆಲಸ ಅಂದರೆ Economic Conference ಎಂಬ ಸಂಪದ್ವಿಷಯಕ ಸಂಸತ್ತಿನ ಸ್ಥಾಪನೆ. ಅದರಲ್ಲಿ ಮೂರು ಶಾಖೆಗಳಿದ್ವು: ಯಂತ್ರಪರಿಶ್ರಮ ಮತ್ತು ವಾಣಿಜ್ಯ; ವಿದ್ಯಾವಿಷಯ; ಭೂವ್ಯವಸಾಯ. ಈ ಮೂರೂ ಶಾಖೆಗಳಿಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಮುಖ್ಯ ಅಧಿಕಾರಿಗಳೂ, ವಿಶೇಷ ಶಾಸ್ತ್ರಜ್ಞರೂ, ಅವರೂ-ಇವರೂ ಸದಸ್ಯರಾಗಿದ್ದರು. ಎಲ್ಲರೂ ತಲೆ ಇದ್ದವರೇ. ಈ ಸಮಿತಿಗಳ ಮೂಲಕ ಮೈಸೂರು ಸಂಸ್ಥಾನದಲ್ಲಿ ಕೆಲವಷ್ಟು radical developments ತರಬೇಕು ಅನ್ನುವ ಕನಸನ್ನು ಕಂಡ ವಿಶ್ವೇಶ್ವರಯ್ಯನವರು ಮಾತ್ರ ಕುಚೋದ್ಯಕ್ಕೆ ಗುರಿಯಾಗಿಬಿಟ್ಟರು -- ಈ ಸಮಿತಿಗಳ ಮೇಧಾವಿಗಳಿಂದಾಗಿ (ಮತ್ತು ಕಳ್ಳರಿಂದಾಗಿ -- ಆಗಿನ ಕಾಲದಲ್ಲಿ ಸರಕಾರಿ ಕಛೇರಿಗಳು ಶುದ್ಧವಾಗಿದ್ವು ಅಂತ ಯಾರಿಗಾದ್ರೂ ಭ್ರಮೆ ಇದ್ರೆ ಆ Economic conference-ನ ಕಾರ್ಯಪದ್ಧತಿಗಳನ್ನು ಓದಿನೋಡಿ ಭ್ರಮೆಯಿಂದ ವಿಮುಕ್ತರಾಗಿ!).

ಈ ಸಮಿತಿಗಳ ಮೇಧಾವಿಗಳಿಂದ ಬಂದ ಅಭಿವೃದ್ಧಿ ಕಾರ್ಯಕ್ರಮಗಳ proposals-ಗಳಲ್ಲಿ ಬಂದ ಒಂದು ಸಲಹೆ ಹೀಗೆ:

"ಮಲೆನಾಡು ಪ್ರಾಂತದ ಕಾಡುಗಳಲ್ಲಿ ಹುಲ್ಲು ಆಳಾಳುದ್ದ ಬೆಳೆದಿರುತ್ತದೆ. ಒಂದು ನೂರು ಜನ ಕುಯ್ಯುವ ಆಳುಗಳನ್ನು ಗೊತ್ತುಮಾಡಿ, ಅವರು ಪ್ರತಿದಿನವೂ ಈ ಹುಲ್ಲನ್ನು ಕೊಯ್ದು ಪಿಂಡಿಪಿಂಡಿಗಳಾಗಿ ಕಟ್ಟಿ ಆ ಪಿಂಡಿಗಳನ್ನು ಬೇಲುಗಳನ್ನಾಗಿ ಜೋಡಿಸಿ ಆ ಬೇಲುಗಳಿಗೆ ಭದ್ರವಾದ ಕಬ್ಬಿಣದ ಪಟ್ಟಿಗಳನ್ನು ಕಟ್ಟಿ, ಇಂಥ ನೂರಿನ್ನೂರು ಬೇಲುಗಳು ಸಿದ್ಧವಾದಾಗ ಅವನ್ನು ಬಾಬಾಬುಡನ್ ಬೆಟ್ಟದ ಪಶ್ಚಿಮದಿಕ್ಕಿನ ಇಳಿಜಾರಿನಲ್ಲಿ ವರಸೆವರಸೆಯಾಗಿ ಜೋಡಿಸಿ ಅಲ್ಲಿಂದ ಬಲವಾಗಿ ಒದ್ದು ಉರುಳಿಸತಕ್ಕದ್ದು. ಆಗ ಹುಲ್ಲಿನ ಬೇಲುಗಳು ತಾವಾಗಿ, ಯಾವ ಖರ್ಚೂ ಇಲ್ಲದೆ, ಉರುಳುರುಳಿಕೊಂಡು ಸಮುದ್ರತೀರವನ್ನು ಸೇರುತ್ತವೆ. ಅಲ್ಲಿಂದ ಹುಲ್ಲನ್ನು ದೋಣಿಗಳ ಮೇಲೆ ವ್ಯಾಪಾರಸ್ಥಾನಗಳಿಗೆ ಸಾಗಿಸತಕ್ಕದ್ದು."

ಇನ್ನೊಂದು ಸಲಹೆ:

"ಬೆಂಗಳೂರಿನಲ್ಲಿ ನಾಟಕಶಾಲೆಗಳು ನಾಲ್ಕಾರಿವೆ. ಒಂದೊಂದರಲ್ಲಿಯೂ ಸಾವಿರ-ಸಾವಿರ ಜನ ಸೇರುತ್ತಾರೆ. ಆ ನಾಟಕಶಾಲೆಗಳ ಸಮೀಪದಲ್ಲಿ ನಾಲ್ಕೈದು ಬೇರೆಬೇರೆ ತೊಟ್ಟಿಗಳನ್ನು ಕಟ್ಟಿಸಿ ಅವುಗಳಲ್ಲಿ ಮೂತ್ರಸಂಗ್ರಹ ಮಾಡಿ ಅದರಿಂದ ಅಮೋನಿಯಂ ಸಲ್ಫೇಟ್ ತಯಾರಿಸಬಹುದು."

ಇದೆೇ ರೀತಿಯ ಸಲಹೆಗಳಿಗೆ ಕೊರತೆಯಿಲ್ಲದೆ ಇಕನಾಮಿಕ್ ಕಾನ್ಫರೆನ್ಸ್ ನಗೆಪಲಾಯ್ತಂತೆ.

ಇಂಥವರನ್ನು ಕಟ್ಟಿಕೊಂಡಿದ್ರೂ ಸಹ ಭದ್ರಾವತಿಯ ಉಕ್ಕು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬ್ಯಾಂಕ್ (State Bank of Mysore), ಕೃಷ್ಣರಾಜಸಾಗರ ಜಲಾಶಯ ಇತ್ಯಾದಿಗಳು ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿದ್ದು ವಿಶ್ವೇಶ್ವರಯ್ಯನವರ ಸಂಕಲ್ಪಶಕ್ತಿ ಮತ್ತು ಕಾರ್ಯದೃಢತೆಗೆ ಸಾಕ್ಷಿ.

ಹಳ್ಳಿಗಳಲ್ಲಿ ಜನಕ್ಕೆ ಸಂಜೆಯ ಹೊತ್ತು ತುಂಬಾ ಸಮಯ ಇದ್ದು ಅದನ್ನು ಹೇಗೆ ಕಳೆಯಬೇಕೆಂದು ಗೊತ್ತಾಗದೆ ಬೆೆೇಗ ಮಲಗುವುದರಿಂದ ಜನಸಂಖ್ಯೆ ಹೆಚ್ಚಾಗ್ತಿದೆ, ಅದನ್ನು ತಡಗಟ್ಟಬೇಕಂದ್ರೆ ಹಳ್ಳಿಹಳ್ಳಿಗಳಿಗೂ ವಿದ್ಯುಚ್ಛತ್ತಿ ಮತ್ತು TV ಸೌಕರ್ಯ ಕೊಟ್ಟು ಜನ ಬೇಗ ಮಲಗದಂತೆ ಮಾಡಬೇಕು ಅನ್ನುವಂಥ ಮಹಾನ್ ಐಡಿಯಾ ಕೊಟ್ಟ 'ಆರೋಗ್ಯ' ಮಂತ್ರಿ ಗುಲಾಂ ನಬೀ ಆಝಾದರಂಥವರನ್ನು ಕಟ್ಟಿಕೊಂಡು ಮೇಧಾವಿ ಮ.ಮೋ.ಸಿಂಗ್ ಏನೋ ಕಡೆದು ಕಟ್ಟೆ ಹಾಕ್ತಾರೆ ಅಂತ ನಾವೇನಾದ್ರೂ ಅಂದ್ಕೊಂಡ್ರೆ ಅದು ನಾವು ನಮ್ಮ ಮೇಧಾಶಕ್ತಿಗೆ ಮಾಡಿಕೊಂಡ ಅವಮಾನ.

PS: ನಾನು ಮೇಲೆ ಉದಾಹರಿಸಿದ ವಿಶ್ವೇಶ್ವರಯ್ಯನವರಿಗೆ ಸಂಬಂಧಪಟ್ಟ ಘಟನೆಗಳ ಮೂಲ: ಡಿ.ವಿ.ಜಿ. ಕೃತಿಶ್ರೇಣಿಯ "ನೆನಪಿನ ಚಿತ್ರಗಳು".

6 comments:

Anonymous said...

Teerthahalli has a unique bridge built by Sir. M.Visvesvaraya across the Tunga River which connects Thirthahalli and kuruvaLLi.
To reach our tOtaa we have to use this bridge and Srikanth will always point out 'See this bridge was built by Sir Vishveshverraya.
Now kids beat him to it, hahahaha
thanks da
:-)
malathi S

L'Étranger said...

Thank you, Malathi, for stopping by and sharing a few words, as always! :)

Manjunatha Kollegala said...

Today I just stumbled upon your blog, and I found it so rich, versatile and interesting. Made a very good reading.

L'Étranger said...

@Manjunatha: Thank you very much for your nice words!! It feels good when a very good writer like you likes my blog! :-)

ರೂpaश्री said...

ಸೆಪ್ ೧೫ ಸರ್ ಎಂ ವಿ ಅವರ ಜನ್ಮದಿನ ಅಂತ ತಿಳಿದಿರಲಿಲ್ಲ, ನೆನಪಿಸಿದಕ್ಕೆ ಥ್ಯಾಂಕ್ಸ್!
ಅವರ ಜೊತೆ ಇಂಥಾ ಘಟಾನುಘಟರಿದ್ದರು ಅನ್ನೋ ಹೊಸ ವಿಚಾರ ತಿಳಿಸಿದಕ್ಕೆ ಮತ್ತೊಂದು ಥ್ಯಾಂಕ್ಸ್. ಅಂತವರ ಜೊತೆಯಿದ್ದೂ ಅದ್ಭುತ ಕೆಲಸ ಮಾಡಿದ SirMV ಬಗ್ಗೆ ಗೌರವ ಇನ್ನೂ ಹೆಚ್ಚುತ್ತದೆ:))

ಇದಕ್ಕೆ ’History repeats itself' ಅನ್ನೋದು ಅನ್ಸುತ್ತೆ...

L'Étranger said...

"History repeats", ಸರಿ, ಆದ್ರೆ ಬರೀ ಕೆಲಸಕ್ಕೆ ಬಾರದವರ history ಮಾತ್ರ ಯಾಕೆ repeat ಆಗತ್ತೆ, ಎಂ.ವಿ. ಅಂಥವರು ಯಾಕೆ repeat ಆಗಲ್ಲ?!